ಕಾಂಗ್ರೆಸ್ ಕೊಟ್ಟ ಭರವಸೆ ಮರೆಯಬೇಡಿ: ಗೃಹಲಕ್ಷ್ಮಿ, ಗೊಬ್ಬರ ವಿಚಾರದಲ್ಲಿ ಸಿ.ಟಿ ರವಿ ಸರ್ಕಾರಕ್ಕೆ ತಿರುಗೇಟು!
ರಾಜಕೀಯ
S3 Media House
6/11/20261 min read


ಬಿಜೆಪಿ ನಾಯಕ ಸಿ.ಟಿ ರವಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿದ ಪ್ರಚಾರ ಮತ್ತು ನೀಡಿದ ಭರವಸೆಗಳನ್ನು ಮರೆಯಬಾರದು ಎಂದು ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಕುರಿತು ಮಾತನಾಡಿದ ಅವರು, "10 ಕೆಜಿ ಅಕ್ಕಿ ಉಚಿತ ಕೊಡುತ್ತೇವೆ ಎಂದಿದ್ದರು. ಆದರೆ ಪ್ರಧಾನಿ ಮೋದಿ ನೀಡುತ್ತಿರುವ 5 ಕೆಜಿ ಅಕ್ಕಿ ಬಿಟ್ಟರೆ ಉಳಿದ 10 ಕೆಜಿ ಅಕ್ಕಿ ಎಲ್ಲಿಂದ ಕೊಡುತ್ತೀರಿ?" ಎಂದು ಪ್ರಶ್ನಿಸಿದ್ದಾರೆ. ಯೋಜನೆಗಳಿಗೆ ಷರತ್ತುಗಳನ್ನು ಹಾಕಿ ಜನರಿಗೆ ತಲುಪದಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ಸಿ.ಟಿ ರವಿ, ಶಕ್ತಿ ಯೋಜನೆ ಸೇರಿದಂತೆ ಕಾಂಗ್ರೆಸ್ ನೀಡಿದ ಭರವಸೆಗಳ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದಿದ್ದಾರೆ.
"ಎಲ್ಲಾ ಮಹಿಳೆಯರಿಗೆ ಉಚಿತ ಎಂದಿದ್ದೀರಿ, ಈಗ ಒಬ್ಬ ಮಹಿಳೆಗೆ ಮಾತ್ರ ನೀಡುತ್ತಿದ್ದೀರಿ. ಕುಟುಂಬಕ್ಕೆ ತಲುಪುವಂತೆ ಯೋಜನೆಯನ್ನು ಸರಿಪಡಿಸಿ" ಎಂದು ಆಗ್ರಹಿಸಿದ್ದಾರೆ. ಗೊಬ್ಬರ ಸಮಸ್ಯೆ ಕುರಿತು ಮಾತನಾಡಿದ ಅವರು, "ಕೃಷಿ ಸಚಿವರು ಗೊಬ್ಬರ ಸ್ಟಾಕ್ ಇದೆ ಎಂದು ಹೇಳಿದ್ದಾರೆ. ಹಾಗಾದರೆ ರೈತರಿಗೆ ಸಮಸ್ಯೆ ಏಕೆ?" ಎಂದು ಪ್ರಶ್ನಿಸಿದ್ದಾರೆ.
ಯೂರಿಯಾ ಗೊಬ್ಬರ ಬೇರೆಡೆಗೆ ಹೋಗುತ್ತಿದೆ ಎಂಬ ದೂರುಗಳಿವೆ. ಕಾಳಸಂತೆ ಮತ್ತು ಅಕ್ರಮ ಸರಬರಾಜಿಗೆ ಅವಕಾಶ ಕೊಡಬಾರದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ನೀತಿ ಆಯೋಗದ ಸಭೆ ಪ್ರಜಾಪ್ರಭುತ್ವದ ಪ್ರಮುಖ ವೇದಿಕೆ. ತಡವಾದರೂ ಕಾಂಗ್ರೆಸ್ ನಾಯಕರು ಭಾಗವಹಿಸಲು ಮುಂದಾಗಿರುವುದನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.
ಮುಖ್ಯಮಂತ್ರಿ ಹಿಂದಿನ ಮುಖ್ಯಮಂತ್ರಿಗಳ ಸಲಹೆ ಪಡೆಯುವುದು ಒಳ್ಳೆಯ ಬೆಳವಣಿಗೆ. ಜನರ ವಿಶ್ವಾಸವೇ ಶಾಶ್ವತ ಎಂದು ಹೇಳಿದ್ದಾರೆ. ಬಿಡದಿ ಟೌನ್ಶಿಪ್ ವಿಚಾರದಲ್ಲಿ ರೈತರು ಶಾಂತಿಯುತವಾಗಿ ತಮ್ಮ ಬೇಡಿಕೆಗಳನ್ನು ಕೇಳುತ್ತಿದ್ದಾರೆ. ರೈತರ ಮೇಲೆ ಅಧಿಕಾರ ಚಲಾಯಿಸಬಹುದು, ಆದರೆ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಿ.ಟಿ ರವಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.


