ಒಂದೇ ವಾರದಲ್ಲಿ ಮೂರನೇ ಅಪಘಾತ - ಅಪಘಾತದ ಹಾಟ್ ಸ್ಪಾಟ್ ಆದ ರಸ್ತೆ!
ಪದೇ ಪದೇ ಅಪಘಾತ: ರಸ್ತೆ ಮೇಲೆ ಹಂಪ್ ನಿರ್ಮಾಣಕ್ಕೆ ಸಾರ್ವಜನಿಕರ ಒತ್ತಾಯ
ಅಪಘಾತಬೆಂಗಳೂರು ಗ್ರಾಮಾಂತರ
S3 Media House
7/10/20261 min read


ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕಮದುರೆಯಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದೊಡ್ಡಬಳ್ಳಾಪುರ–ನೆಲಮಂಗಲ ರಸ್ತೆಯು ಅಪಘಾತಗಳ ಹಾಟ್ಸ್ಪಾಟ್ ಆಗಿ ಮಾರ್ಪಟ್ಟಿದ್ದು, ಕೇವಲ ಒಂದೇ ವಾರದಲ್ಲಿ ಇದು ಮೂರನೇ ಅಪಘಾತವಾಗಿದೆ.
ಕುಡಿದ ಅಮಲಿನಲ್ಲಿ ಕಂಟೈನರ್ ಲಾರಿ ಚಲಾಯಿಸಿದ್ದೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮೊದಲು ಮುಂದೆ ಸಾಗುತ್ತಿದ್ದ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದ ಕಂಟೈನರ್, ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮೂರು ಅಂಗಡಿಗಳಿಗೆ ನುಗ್ಗಿದೆ.
ಶನಿಮಹಾತ್ಮ ದೇವಾಲಯದ ಹಿಂಭಾಗದಲ್ಲಿ ನಡೆದ ಈ ಅಪಘಾತದಲ್ಲಿ ಮೂರು ಅಂಗಡಿಗಳು ಸಂಪೂರ್ಣ ಹಾನಿಗೊಳಗಾಗಿವೆ. ಅದೃಷ್ಟವಶಾತ್ ಘಟನೆ ನಡೆದ ವೇಳೆ ಅಂಗಡಿಗಳು ಮುಚ್ಚಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇಲ್ಲದಿದ್ದರೆ ದೊಡ್ಡ ದುರಂತವೇ ಸಂಭವಿಸುವ ಸಾಧ್ಯತೆ ಇತ್ತು.
ಈ ರಸ್ತೆಯಲ್ಲಿ ಪದೇ ಪದೇ ಅಪಘಾತಗಳು ನಡೆಯುತ್ತಿರುವುದಕ್ಕೆ ಅತಿವೇಗವೇ ಪ್ರಮುಖ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಪಘಾತಗಳನ್ನು ತಡೆಯಲು ರಸ್ತೆಯಲ್ಲಿ ತಕ್ಷಣವೇ ಹಂಪ್ಗಳನ್ನು ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಘಟನೆ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.


