ಮಾಂಗಲ್ಯ ಸರ ಕದ್ದು ಹೆಣವಾಗಿದ್ದೇಗೆ ಬ್ಯಾಟರಿ ಜಯಂತ್?
ಆಂಬ್ಯುಲೆನ್ಸ್ ನಿಂದ ಎಸ್ಕೇಪ್ ಆಗಿದ್ದ ರೌಡಿಶೀಟರ್ ಅನುಮಾನಾಸ್ಪದ ಸಾವು?
LATEST NEWSಬೆಂಗಳೂರು ಗ್ರಾಮಾಂತರಅಪರಾಧ
S3 Media House
8/25/20261 min read


ಹೌದು, ಇಲ್ಲೊಬ್ಬ ಖತರ್ನಾಕ್ ಕಳ್ಳ ಮಾಂಗಲ್ಯ ಸರ ಕದ್ದು ಸಾರ್ವಜನಿಕರ ಬಳಿ ಗೂಸಾ ತಿಂದು ಕೊನೆಗೆ ಕೆರೆಯಲ್ಲಿ ಹೆಣವಾಗಿ ಪತ್ತೆಯಾಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನಲ್ಲಿ ಘಟನೆ ನಡೆದಿದ್ದು, ಸದ್ಯಕ್ಕೆ ನೆಲಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಅಂದಹಾಗೆ ಕಳೆದ ಎರಡು ದಿನಗಳ ಹಿಂದೆ ನೆಲಮಂಗಲ ತಾಲೂಕಿನ ಕುಲುವನಹಳ್ಳಿ ಬಳಿ ವೃದ್ಧೆ ಬಳಿ ಚಿನ್ನದ ಸರ ಕದ್ದು ಪರಾರಿಯಾಗಲು ಯತ್ನಿಸಿದ್ದ ಜಯಂತ್ ಹಾಗೂ ಆತನ ಸ್ನೇಹಿತ ಯತೀಶ್ ಸಾರ್ವಜನಿಕರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಈ ವೇಳೆ ಸಾರ್ವಜನಿಕರೆಲ್ಲ ಸೇರಿ ಇಬ್ಬರಿಗೂ ಸರಿಯಾಗಿ ಗೂಸಾ ನೀಡಿದ್ದಾರೆ. ಗೂಸಾ ತಿಂದ ಇಬ್ಬರು ಖತರ್ನಾಕ್ ಕಳ್ಳರು ಗಾಯಾಗೊಂಡಿದ್ದಾರೆ. ಕೂಡಲೇ ಸಾರ್ವಜನಿಕರು ಇಬ್ಬರು ಆರೋಪಿಗಳನ್ನು 108 ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಆಂಬ್ಯುಲೆನ್ಸ್ ನಲ್ಲ ಆಸ್ಪತ್ರೆಗೆ ರವಾನಿಸುವ ವೇಲೆ ಇಬ್ಬರು ಕಳ್ಳರು ಆಂಬ್ಯುಲೆನ್ಸ್ ನಲ್ಲಿದ್ದ ನರ್ಸ್ಗಳಿಗೆ ಥಳಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಹುಡುಕಾಟಕ್ಕೆ ಮುಂದಾಗಿದ್ದರು. ಆದರೆ ಇಂದು ಓರ್ವ ಕಳ್ಳ ಜಯಂತ್ ನ ಮೃತದೇಹ ನೆಲಮಂಗಲ ತಾಲ್ಲೂಕಿನ ದೊಡ್ಡೇರಿ ಗ್ರಾಮದ ಕರೆಯಲ್ಲಿ ಪತ್ತೆಯಾಗಿದೆ.ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಮತ್ತೋರ್ವ ಆರೋಪಿ ಯತೀಶ್ ಗಾಗಿ ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮೃತ ಆರೋಪಿ ಬ್ಯಾಟರಿ ಜಯಂತ್ 22 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಖತರ್ನಾಕ್ ಕಳ್ಳನಾಗಿದ್ದಾನೆ.
ಮತ್ತೊಂದೆಡೆ ಸರ ಕದ್ದು ಪರಾರಿಯಾಗಿದ್ದ ಕಳ್ಳ ಕೆರೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದು ಹೇಗೆ ಎಂಬುದು ಇಲ್ಲಿ ಎಲ್ಲರಿಗೂ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.


