ದುಡ್ಡಿನ ಅಮಲು, ಗೂಂಡಾಗಿರಿ ರಾಜಕಾರಣಕ್ಕೆ ತಿರುಗೇಟು: ಸದಾನಂದಗೌಡ
ಕೆಂಪೇಗೌಡರ ಹೆಸರಿನಲ್ಲಿ ಗೆದ್ದು ಅವರಿಗೇ ಅವಮಾನ ಮಾಡುತ್ತಿದ್ದಾರೆ: ಸದಾನಂದಗೌಡ
LATEST NEWSರಾಜಕೀಯ
S3 Media House
6/29/20261 min read


ತಮ್ಮ ವಿರುದ್ಧ ಮಾಡಿರುವ ಟೀಕೆಗಳಿಗೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಂಪೇಗೌಡರ ಹೆಸರನ್ನು ಬಳಸಿಕೊಂಡೇ ಕೆಲವರು ಚುನಾವಣೆಯಲ್ಲಿ ಗೆದ್ದಿದ್ದಾರೆ. ಒಮ್ಮೆ ಸಣ್ಣ ಕೈಗಾರಿಕೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ನಂತರ ಭೂಗತ ಜಗತ್ತಿನ ಜೊತೆ ಸೇರಿ ಭೂಮಿ ಲೂಟಿ ನಡೆಸಿ ರಾಜಕೀಯಕ್ಕೆ ಬಂದಿದ್ದಾರೆ ಎಂದು ಅವರು ಆರೋಪಿಸಿದರು.
ಬಿಡಿಎಯನ್ನು ಮುಳುಗಿಸಿ, ತಾನೇ ಸಾಚಾ ಎಂದು ಹೇಳಿಕೊಳ್ಳುವ ವ್ಯಕ್ತಿಗೆ ನಾನು ಉತ್ತರ ನೀಡುವ ಅಗತ್ಯವಿಲ್ಲ. ನನಗೆ ಫೋನ್ ಮಾಡಿ ಕಾರ್ಯಕ್ರಮಕ್ಕೆ ಬರಬೇಡಿ ಎಂದಿದ್ದರು ಎಂದು ಸದಾನಂದಗೌಡ ಹೇಳಿದರು.
ಕೆಂಪೇಗೌಡರು ಕೇವಲ ಕಾಂಗ್ರೆಸ್ಗೆ ಸೀಮಿತವಾದವರಲ್ಲ. ಕೆಂಪೇಗೌಡರ ಹೆಸರಿನಲ್ಲಿ ಮತ ಪಡೆದು, ಅವರನ್ನೇ ಅವಮಾನಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಅವರಿಗೆ ಮಾಡಿದ ಅಪಮಾನ ಎಂದು ಅವರು ಆರೋಪಿಸಿದರು.
ಹಳೆ ಮೈಸೂರು ಭಾಗದವರು ಮಾತ್ರ ಒಕ್ಕಲಿಗರು, ಮಂಗಳೂರಿನವರು ಒಕ್ಕಲಿಗರಲ್ಲ ಎಂಬ ಹೇಳಿಕೆ ಖಂಡನೀಯ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದ ವಿವಿಧ ಭಾಗಗಳಲ್ಲಿ ಒಕ್ಕಲಿಗ ಸಮುದಾಯ ಪ್ರತಿಭಟನೆ ಆರಂಭಿಸಿದ್ದು, ನಾಳೆ ಸುದ್ದಿಗೋಷ್ಠಿಯನ್ನೂ ನಡೆಸಲಿದ್ದಾರೆ ಎಂದು ತಿಳಿಸಿದರು.
ದಕ್ಷಿಣ ಕನ್ನಡದ ಬಗ್ಗೆ ಅರಿವಿಲ್ಲದೆ ಗೂಂಡಾಗಿರಿಯಲ್ಲಿ ತೊಡಗಿರುವ ವ್ಯಕ್ತಿ ಎಂದು ವಾಗ್ದಾಳಿ ನಡೆಸಿದ ಸದಾನಂದಗೌಡ, ತಾವು ಪುತ್ತೂರಿನಲ್ಲಿ ಮುತ್ತಪ್ಪ ರೈ ವಿರುದ್ಧ ಹೋರಾಟ ನಡೆಸಿದ ವ್ಯಕ್ತಿ ಎಂದು ಹೇಳಿದರು.
ದುಡ್ಡಿನ ಅಮಲಿನಲ್ಲಿ ಎಲ್ಲರನ್ನು ಖರೀದಿಸಬಹುದು ಎನ್ನುವ ಮನೋಭಾವ ಹೊಂದಿರುವವರಿಗೆ ಮುಂದಿನ ದಿನಗಳಲ್ಲಿ ಅದೇ ತಿರುಗೇಟು ಸಿಗಲಿದೆ. ಈ ವಿಚಾರವನ್ನು ರಾಷ್ಟ್ರೀಯ ನಾಯಕರ ಗಮನಕ್ಕೂ ತರುತ್ತೇನೆ ಎಂದು ಡಿ.ವಿ. ಸದಾನಂದಗೌಡ ಹೇಳಿದರು.


