ಚಿನ್ನ ಮರಳಿ ಕೊಡದ SBI ವಿರುದ್ಧ ಗ್ರಾಹಕರ ಆಕ್ರೋಶ: ಬ್ಯಾಂಕ್ಗೆ ಬೀಗ ಹಾಕಿ ಅಹೋರಾತ್ರಿ ಹೋರಾಟ!
ಸಾರ್ವಜನಿಕ ಸಮಸ್ಯೆಗಳುLATEST NEWSಅಪರಾಧ
S3 Media House
6/11/20261 min read


ಭೀಮಾತೀರದ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕರ ಆಕ್ರೋಶ ತೀವ್ರಗೊಂಡಿದೆ. ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಗ್ರಾಹಕರು ರಾತ್ರಿ ವೇಳೆ ಪ್ರತಿಭಟನೆ ನಡೆಸಿದ್ದಾರೆ.
2025ರ ಸೆಪ್ಟೆಂಬರ್ 16ರಂದು ನಡೆದಿದ್ದ ಬ್ಯಾಂಕ್ ದರೋಡೆ ಪ್ರಕರಣ ನಡೆದು 8 ತಿಂಗಳು ಕಳೆದರೂ, ಅಡವಿಟ್ಟಿದ್ದ ಚಿನ್ನ ಮರಳಿ ಸಿಗದೆ ಗ್ರಾಹಕರು ಪರದಾಡುವಂತಾಗಿದೆ. ಬ್ಯಾಂಕ್ ಅಧಿಕಾರಿಗಳ ಜೊತೆ ಹಲವು ಬಾರಿ ಸಭೆ ನಡೆದಿದ್ದು, ಈ ತಿಂಗಳ 6ರಂದು ಹಣ ಪಾವತಿ ಮಾಡುವುದಾಗಿ ಭರವಸೆ ನೀಡಲಾಗಿತ್ತು.
ಅಡವಿಟ್ಟ ಚಿನ್ನದ ನಿವ್ವಳ ತೂಕಕ್ಕೆ ಇಂದಿನ ಮಾರುಕಟ್ಟೆ ಬೆಲೆ ಜೊತೆಗೆ ಶೇ.20 ಹೆಚ್ಚುವರಿ ಹಣ ನೀಡುವುದಾಗಿ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದರು. ಆದರೆ ಗ್ರಾಹಕರು, ಅಸಲು ತೂಕದ ಚಿನ್ನದ ಇಂದಿನ ಮಾರುಕಟ್ಟೆ ಬೆಲೆಯನ್ನೇ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ, ನಿಗದಿತ ದಿನಾಂಕ ಕಳೆದರೂ ಹಣ ಪಾವತಿಸದ ಕಾರಣ ಗ್ರಾಹಕರು ಬ್ಯಾಂಕ್ಗೆ ಬೀಗ ಹಾಕಿ ಅಹೋರಾತ್ರಿ ಹೋರಾಟ ನಡೆಸಲು ಮುಂದಾಗಿದ್ದಾರೆ. ಸ್ಥಳಕ್ಕೆ ಇಂಡಿ ಡಿವೈಎಸ್ಪಿ ಹಾಗೂ ಎಸ್ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಭರವಸೆ ನೀಡಿದ ಬಳಿಕ, ತಡರಾತ್ರಿ ಗ್ರಾಹಕರು ಮನೆಗೆ ತೆರಳಿದ್ದಾರೆ. ಚಿನ್ನದ ಹಣಕ್ಕಾಗಿ ಗ್ರಾಹಕರ ಹೋರಾಟ ಮುಂದುವರೆದಿದೆ.


